ಕೆ ಆರ್ ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮೂಡನಹಳ್ಳಿ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ಮಹಿಳೆಯರು ಕೆ.ಆರ್.ಪೇಟೆ ತಾಲ್ಲೂಕು ಕೇಂದ್ರದಲ್ಲಿರುವ ಅಬಕಾರಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದ ನೂರಾರು ಮಹಿಳೆಯರು ಹಾಗೂ ಯುವಕರು ಪ್ರತಿಭಟನೆ ನಡೆಸಿ, ನಮ್ಮ ಮೂಡನಹಳ್ಳಿ ಗ್ರಾಮದ ಬೀದಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮಧ್ಯ ಮಾರಾಟವನ್ನು ಇಂದಿನಿಂದಲೇ ಬಂದ್ ಮಾಡುವ ಆದೇಶ ಹೊರಡಿಸುವವರೆವಿಗೂ ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ಮೂಡನಹಳ್ಳಿ ಗ್ರಾಮದಿಂದ ಪ್ರಮುಖ ರಸ್ತೆ ಮೂಲಕ ಕೆ ಆರ್ ಪೇಟೆ ಪಟ್ಟಣದ ಶಾಸಕರಾದ ಹೆಚ್ ಟಿ ಮಂಜು ಅವರ ಮನೆಯವರೆಗೆ ಪಾದಯಾತ್ರೆ ಮೂಲಕ ಆಗಮಿಸಿ ಶಾಸಕರಿಗೆ ಮನವಿ ಸಲ್ಲಿಸಿ ನಂತರ ಅಬಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರ ಮನವಿ ಆಲಿಸಿದ ಶಾಸಕ ಹೆಚ್ ಟಿ ಮಂಜು ಅವರು ಅಬಕಾರಿ ಡಿಸಿ ಅವರಿಗೆ ವಿಡಿಯೋ ಕರೆ ಮಾಡಿ ಮಾತನಾಡಿ ತಕ್ಷಣವೇ ಮೂಡನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟವನ್ನು ಬಂದ್ ಮಾಡಿಸಬೇಕು. ಜನರ ಭಾವನೆಗೆ ಬೆಲೆ ಕೊಟ್ಟು ಮಧ್ಯ ಮಾರಾಟವನ್ನು ನಿಲ್ಲಿಸಿ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಕಟ್ಟು ನಿಟ್ಟಿನ ಕ್ರಮ ವಹಿಸುವಂತೆ ಖಡಕ್ ಸೂಚನೆ ನೀಡಿದರು.
ಗ್ರಾಮದ ಮುಖಂಡರು ಮಾತನಾಡಿ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸದಿದ್ದರೆ ಉಗ್ರ ಹೋರಾಟವನ್ನು ಮಾಡಲು ಹಿಂಜರಿಯುವುದಿಲ್ಲ ಎಂದು ಗ್ರಾಮಸ್ಥರು ಖಡಕ್ಕಾಗಿ ತಿಳಿಸಿದ್ದಾರೆ.
ಕುಡಿತದ ಚಟದಿಂದ ಯುವಕರು, ಮನೆಯ ಯಜಮಾನರು ಸಹ ಹಾಳಾಗುತ್ತಿದ್ದಾರೆ.ಮಕ್ಕಳ ಮೇಲೆ ಪರಿಣಾಮ ಕೆಟ್ಟ ಬೀರುತ್ತಿದೆ. ಅಕ್ರಮ ಮದ್ಯ ಮಾರಾಟದಿಂದಾಗಿ ಮೂಡನಹಳ್ಳಿ ಗ್ರಾಮದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಗ್ರಾಮದ ನೆಮ್ಮದಿ ಹಾಳಾಗಿದೆ ಎಂದು ಪ್ರತಿಭಟನಾ ನಿರತ ಮಹಿಳೆಯರು ಹಾಗೂ ಗ್ರಾಮಸ್ಥರು ಗಂಭೀರ ಆರೋಪ ಮಾಡಿದರು.





