ಲಕ್ನೋ : ದೇಶದ ರಕ್ಷಕರಾದ ಯೋಧರು ಇಂದು ತಾವು ರಕ್ಷಿಸುತ್ತಿರುವ ಜನರಿಂದಲೇ ಅಪಮಾನ ಅನುಭವಿಸುವ ಸ್ಥಿತಿಗೆ ತಲುಪಿರುವುದನ್ನು ತೋರಿಸುವ ಹೃದಯವಿದ್ರಾವಕ ಘಟನೆ ಮೀರತ್ನಲ್ಲಿ ನಡೆದಿದೆ. ಟೋಲ್ ಪ್ಲಾಜಾದ ಸಿಬ್ಬಂದಿ ಒಬ್ಬ ಯೋಧನನ್ನು ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿದ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಗೆ ಒಳಗಾದ ಯೋಧನನ್ನು ಕಪಿಲ್ ಕವಾಡ್ ಎಂದು ಗುರುತಿಸಲಾಗಿದ್ದು, ಅವರು ಭಾರತೀಯ ಸೇನೆಯ ರಜಪೂತ್ ರೆಜಿಮೆಂಟ್ನ ಸದಸ್ಯರಾಗಿದ್ದಾರೆ. ರಜೆ ಮುಗಿಸಿ ಕರ್ತವ್ಯದ ಸ್ಥಳವಾದ ಶ್ರೀನಗರಕ್ಕೆ ತೆರಳುತ್ತಿದ್ದ ಕಪಿಲ್, ದೆಹಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದಾಗ ಮೀರತ್ ಬಳಿ ಇರುವ ಟೋಲ್ ಪ್ಲಾಜಾದಲ್ಲಿ ತಡೆಗೊಳ್ಳಲಾದರು.
ವಿಮಾನಕ್ಕೆ ತಡವಾಗುತ್ತಿದೆ ಎಂಬ ಆತಂಕದಿಂದ ಕಾರಿನಿಂದ ಇಳಿದು ಟೋಲ್ ಸಿಬ್ಬಂದಿಯೊಂದಿಗೆ ಮಾತನಾಡಲು ಮುಂದಾದ ಕಪಿಲ್, ವಾಗ್ವಾದಕ್ಕೆ ಒಳಗಾಗಿದರು. ಇದಾದ ನಂತರ ಐವರು ಸಿಬ್ಬಂದಿ ಕಪಿಲ್ ಮತ್ತು ಅವರ ಸಂಬಂಧಿಯನ್ನು ಥಳಿಸಿದರು. ಈ ನಡುವೆ, ಕಪಿಲ್ ಅವರನ್ನು ಕಂಬಕ್ಕೆ ಕಟ್ಟಿದ ಮೇಲೆ ಮನಬಂದಂತೆ ದಾಳಿ ನಡೆಸಿದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಜನತೆಯಲ್ಲಿ ಆಕ್ರೋಶ ಮೂಡಿಸಿದೆ.
ಘಟನೆಯ ತನಿಖೆ ಆರಂಭಿಸಿದ ಪೊಲೀಸರು, ನಾಲ್ವರನ್ನು ಬಂಧಿಸಿರುವುದಾಗಿ ಎಸ್ಪಿ ರಾಕೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಲು ಕಾರ್ಯಾಚರಣೆ ಮುಂದುವರಿಯುತ್ತಿದೆ.





