ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಅವಲಂಬನೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟು, ಜವಾಬ್ದಾರಿಯುತ ಡಿಜಿಟಲ್ ಬಳಕೆಗೆ ಸಂಬಂಧಿಸಿದ ಕರಡು ನೀತಿಯನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಘೋಷಣೆಯ ಅನಂತರ ರೂಪುಗೊಂಡ ಈ ನೀತಿ, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಸೇರಿದಂತೆ ಹಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಸೂಚಿಸುತ್ತದೆ.
ಕರಡು ನೀತಿ ಪ್ರಕಾರ, ಶಾಲಾ ಕೆಲಸ ಹೊರತುಪಡಿಸಿ ವಿದ್ಯಾರ್ಥಿಗಳು ದಿನಕ್ಕೆ ಗರಿಷ್ಠ 1 ಗಂಟೆ ಮಾತ್ರ ಮೊಬೈಲ್ ಬಳಸಬೇಕು ಎಂದು ಶಿಫಾರಸು ಮಾಡಲಾಗಿದೆ. ನಿದ್ರೆಗೆ ಒಂದು ಗಂಟೆ ಮೊದಲು ಎಲ್ಲಾ ಡಿಜಿಟಲ್ ಸಾಧನಗಳನ್ನು ನಿಲ್ಲಿಸುವ ‘ಟೆಕ್ ಕರ್ಫ್ಯೂ’ ಜಾರಿಗೊಳಿಸುವುದಕ್ಕೂ ಸೂಚನೆ ನೀಡಲಾಗಿದೆ. ಪ್ರತಿ ಶಾಲೆಯೂ ತನ್ನದೇ ಡಿಜಿಟಲ್ ಬಳಕೆ ನೀತಿಯನ್ನು ರೂಪಿಸಿ, ಡಿಜಿಟಲ್ ವೆಲ್ನೆಸ್ ಸಮಿತಿ ಸ್ಥಾಪಿಸುವುದು ಕಡ್ಡಾಯವಾಗಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಿಮ್ಹಾನ್ಸ್, ಶಿಕ್ಷಣ ಇಲಾಖೆ ಹಾಗೂ ತಜ್ಞರ ಸಹಭಾಗಿತ್ವದಲ್ಲಿ ರೂಪುಗೊಂಡ ಈ ನೀತಿ, ಸೈಬರ್ ಬುಲಿಯಿಂಗ್ ತಡೆ, ಸುರಕ್ಷಿತ ಡಿಜಿಟಲ್ ಬಳಕೆ, ಶಿಕ್ಷಕರ ತರಬೇತಿ ಮತ್ತು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ರಕ್ಷಣೆಗೆ ವಿಶೇಷ ಒತ್ತು ನೀಡುತ್ತದೆ. ಜೊತೆಗೆ, ಪೋಷಕರಿಗೂ ಮಕ್ಕಳ ಡಿಜಿಟಲ್ ಚಟುವಟಿಕೆಗಳ ಮೇಲ್ವಿಚಾರಣೆ ಮತ್ತು ಆಫ್ಲೈನ್ ಚಟುವಟಿಕೆಗಳನ್ನು ಉತ್ತೇಜಿಸುವ ಜವಾಬ್ದಾರಿ ನೀಡಲಾಗಿದೆ.





