ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತೀ ಹಬ್ಬವೂ ಒಂದು ನಿರ್ದಿಷ್ಟ ಮಾಸದ ನಕ್ಷತ್ರ ಅಥವಾ ತಿಥಿಯಂದು ಆಚರಿಸಿದರೆ ಕೆಲವು ಹಬ್ಬಗಳು ನಿರ್ದಿಷ್ಟ ದಿನಗಳಲ್ಲಿಯೇ ಆಚರಿಸುವ ರೂಢಿಯಲ್ಲಿದೆ, ಶ್ರಾವಣ ಮಾಸದ ನಾಗರಪಂಚಮಿ ಹಬ್ಬವಾದ ನಂತರ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ.
ವಿದ್ಯೆಗೆ ಬ್ರಹ್ಮನ ಅರಸಿ ಸರಸ್ವತಿ ಅದಿದೇವತೆಯಾದರೆ, ಸುಖಃ ಮತ್ತು ಸಂಪತ್ತುಗಳಿಗೆ ವಿಷ್ಣುವಿನ ಪತ್ನಿ ಮಹಾ ಲಕ್ಶ್ಮೀಯೇ ಅಧಿದೇವತೆ. ಯಾರಿಗೆ ಲಕ್ಷ್ಮಿ ಚೆನ್ನಾಗಿ ಒಲಿದಿರುತ್ತಾಳೋ ಅಂತಹವರ ಬಾಳು ಹಸನಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಇಂದಿನ ದಿನಗಳಲ್ಲಿ ಬಹುತೇಕರು ಸರಸ್ವತಿಗಿಂತ ಲಕ್ಷ್ಮಿಯನ್ನು ಒಲಿಸಿಕೊಳ್ಳಲೇ ಬಯಸುತ್ತಿರುವುದು ಆಶ್ಚರ್ಯವಾದರೂ ನಂಬಲೇಬೇಕಾದ ಸತ್ಯವಾಗಿದೆ. ಹಾಗಾಗಿ ಈ ಕಲಿಯುಗದಲ್ಲಿ ಯಾವುದೇ ಜಾತಿಗಳ ತಾರತಮ್ಯವಿಲ್ಲದೆ ಪೂಜಿಸುವ ಏಕೈಕ ದೇವತೆ ಲಕ್ಷ್ಮಿ ಎಂದರೆ ಅತಿಶಯೋಕ್ತಿಯೇನಲ್ಲ.
ವರಮಹಾಲಕ್ಷ್ಮಿ ಹಬ್ಬದ ದಿನ ಈ ತಪ್ಪುಗಳು ನಿಮ್ಮಿಂದ ಆಗದಿರಲಿ:
• ವರಮಹಾಲಕ್ಷ್ಮಿ ಹಬ್ಬದ ದಿನ ಪೂಜೆ ಮಾಡುವ ಸ್ಥಳದಲ್ಲಿ ಅಥವಾ ದೇವರ ಕೋಣೆಯಲ್ಲಿ ಮುರಿದ ವಿಗ್ರಹಗಳನ್ನು ಇಡಬಾರದು.
• ವರಮಹಾಲಕ್ಷ್ಮಿ ಮರದ ಕುರ್ಚಿ ಮೇಲೆ ಕೂರಿಸಿ. ಅಪ್ಪಿತಪ್ಪಿಯೂ ಕಬ್ಬಿಣದ ಕುರ್ಚಿ ಮೇಲೆ ಲಕ್ಷ್ಮಿಯನ್ನು ಕೂರಿಸಿ ಪೂಜೆ ಮಾಡಬೇಡಿ.
• ಅಲಂಕಾರಕ್ಕಾಗಿ ಪ್ಲಾಸ್ಟಿಕ್ ಹೂವುಗಳು ಹಾಗೂ ಹಣ್ಣುಗಳನ್ನು ಬಳಸಿ ವರಮಹಾಲಕ್ಷ್ಮಿ ವ್ರತಾಚರಣೆ ಮಾಡಬೇಡಿ.
• ನೀವೇನಾದ್ರೂ ಕಲಶವಿಟ್ಟು ಪೂಜೆ ಮಾಡುತ್ತೀರಿ ಅಂತಾದರೆ ತ್ರಾಮದ ಕಲಶವನ್ನು ಬಳಸುವುದು ಸೂಕ್ತ. ಪೂಜೆಯ ವೇಳೆ ಮನಸ್ಸು ಶುದ್ಧವಾಗಿರಲಿ, ಕೆಟ್ಟ ಆಲೋಚನೆಗಳನ್ನು ಮಾಡಬೇಡಿ.
• ಈ ವ್ರತಾಚರಣೆಗೆ ಸಾಲವಾಗಿ ತಂದ ಹಣವನ್ನಾಗಲಿ ಹಾಗೂ ಆಭರಣಗಳನ್ನು ಬಳಸಬೇಡಿ. ಇದರಿಂದ ಲಕ್ಷ್ಮಿ ದೇವಿಯೂ ಮುನಿಸಿಕೊಳ್ಳುತ್ತಾಳೆ. ತುಕ್ಕು ಹಿಡಿದ ಆಭರಣಗಳನ್ನು ಎಂದಿಗೂ ಬಳಸುವುದು ತಪ್ಪಿಸಿ




