ಬೀದರ್: “ಊಹಾ ಪತ್ರಿಕೋದ್ಯಮವು ಸಮಾಜಕ್ಕೆ ಅತ್ಯಂತ ಅಪಾಯಕಾರಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಬೀದರ್ನಲ್ಲಿ ಆಯೋಜಿಸಲಾಗಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮಗಳು ಕೇವಲ ಮಾಹಿತಿಯನ್ನು ನೀಡುವ ಕೆಲಸಕ್ಕೆ ಸೀಮಿತವಾಗದೆ, ಸಮಾಜದ ನ್ಯೂನ್ಯತೆಗಳನ್ನು ಹೋಗಲಾಡಿಸಿ ಸುಧಾರಣೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಸಂವಿಧಾನದ ಆಶಯ ಮತ್ತು ಪತ್ರಿಕಾ ಧರ್ಮ:
ಪತ್ರಕರ್ತರು ತಮ್ಮ ವೃತ್ತಿ ಬದುಕಿನಲ್ಲಿ ಸಂವಿಧಾನದ ಆಶಯಗಳನ್ನು ಎಷ್ಟರಮಟ್ಟಿಗೆ ಜಾರಿಗೊಳಿಸುತ್ತಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರು ಧ್ವನಿ ಇಲ್ಲದವರ ಧ್ವನಿಯಾಗಿ ಪತ್ರಿಕೋದ್ಯಮವನ್ನು ಬಳಸಿಕೊಂಡಿದ್ದರು. ಆದರೆ, ಇಂದು ಕ್ಷುಲ್ಲಕ ವಿಚಾರಗಳನ್ನು ದಿನವಿಡೀ ಪ್ರಸಾರ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. “ಗಂಡ-ಹೆಂಡತಿ ಜಗಳವನ್ನು ತೋರಿಸುವುದರಿಂದ ಸಮಾಜಕ್ಕೆ ಯಾವ ಪ್ರಯೋಜನವಿದೆ?” ಎಂದು ಪ್ರಶ್ನಿಸಿದ ಸಿಎಂ, ಮಾಧ್ಯಮಗಳು ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣಕ್ಕೆ ಪೂರಕವಾದ ಅಂಶಗಳನ್ನು ಜನರಿಗೆ ತಲುಪಿಸಬೇಕು ಎಂದರು.
ಕಾರ್ಪೊರೇಟ್ ಹಿಡಿತದ ಬಗ್ಗೆ ಕಳವಳ:
ಇಂದಿನ ಮಾಧ್ಯಮ ಸಂಸ್ಥೆಗಳು ಕಾರ್ಪೊರೇಟ್ ಹಿತಾಸಕ್ತಿಗಳ ಹಿಡಿತಕ್ಕೆ ಸಿಲುಕಿರುವುದು ಬೇಸರದ ಸಂಗತಿ. ಪತ್ರಕರ್ತರು ಸತ್ಯವನ್ನು ಬರೆದರೂ, ಮಾಲೀಕರ ಒತ್ತಡದಿಂದಾಗಿ ಸಂಪಾದಕರು ಸುದ್ದಿಯನ್ನು ಬದಲಾಯಿಸುವ ಸ್ಥಿತಿ ನಿರ್ಮಾಣವಾಗಿದೆ. “ನಾನು ಮಂತ್ರಿಯಾಗಿ 40 ವರ್ಷಗಳಾದರೂ, ನಮ್ಮ ಸರ್ಕಾರದ ಪರ ಬರೆಯಿರಿ ಎಂದು ಇದುವರೆಗೂ ಯಾರನ್ನೂ ಕೇಳಿಲ್ಲ” ಎಂದು ಹೇಳಿದ ಅವರು, ಪತ್ರಿಕೆಗಳ ಮೇಲೆ ಜನಸಾಮಾನ್ಯರು ಇಟ್ಟಿರುವ ನಂಬಿಕೆಯನ್ನು ಪತ್ರಕರ್ತರು ಉಳಿಸಿಕೊಳ್ಳಬೇಕು ಎಂದು ಆಶಿಸಿದರು.
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ:
ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯನ್ನು ತಮ್ಮ ಸರ್ಕಾರವೇ ಜಾರಿಗೆ ತಂದಿದೆ ಎಂದು ಸ್ಮರಿಸಿದ ಸಿಎಂ, ಈ ಸೌಲಭ್ಯವನ್ನು ಪಡೆಯುವಲ್ಲಿ ನಿಯಮಗಳ ಅಡಚಣೆ ಇದ್ದರೆ ಅವುಗಳನ್ನು ಚರ್ಚಿಸಿ ಶೀಘ್ರವೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.





