ಹಾವೇರಿ: ಅರಣ್ಯ ಇಲಾಖೆಯು ಅರಣ್ಯ ಭೂಮಿ ಒತ್ತುವರಿ ನೆಪದಲ್ಲಿ ದಶಕಗಳಿಂದ ವಾಸವಿದ್ದ ಬಡವರ ಮೇಲೆ ಎಫ್ಐಆರ್ ದಾಖಲಿಸಿ, ಒಕ್ಕಲೆಬ್ಬಿಸುತ್ತಿರುವುದನ್ನು ವಿರೋಧಿಸಿ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಅವರು ಸಾರ್ವಜನಿಕ ಸಭೆಯಲ್ಲೇ ಕಣ್ಣೀರು ಹಾಕಿದ್ದಾರೆ. ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ (KDP) ಸಭೆಯಲ್ಲಿ ಈ ಭಾವನಾತ್ಮಕ ಘಟನೆ ನಡೆದಿದೆ.
ನೋವು ತೋಡಿಕೊಂಡ ಉಪಸಭಾಪತಿ:
ಸ್ವಾತಂತ್ರ್ಯ ಪೂರ್ವದಿಂದಲೂ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಗ್ರಾಮಸ್ಥರ ಮೇಲೆ ಅರಣ್ಯ ಇಲಾಖೆ ಈಗ ಎಫ್ಐಆರ್ ದಾಖಲಿಸುತ್ತಿರುವುದಕ್ಕೆ ರುದ್ರಪ್ಪ ಲಮಾಣಿ ತೀವ್ರ ಬೇಸರ ವ್ಯಕ್ತಪಡಿಸಿದರು. “ನಾನು ಕಲಿತ ಶಾಲೆಯೇ ಅರಣ್ಯ ವ್ಯಾಪ್ತಿಯಲ್ಲಿದೆ ಎಂದು ಪ್ರಕರಣ ದಾಖಲಿಸಿದರೆ ಹೇಗೆ? 75 ವರ್ಷಗಳಿಂದ ವಾಸವಿದ್ದವರನ್ನು ಒಕ್ಕಲೆಬ್ಬಿಸಿದರೆ ಸಾವಿರಾರು ಬಡವರು ಎಲ್ಲಿಗೆ ಹೋಗಬೇಕು? ನಮ್ಮನ್ನು ನಂಬಿದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗದಿದ್ದರೆ ನಮ್ಮ ಅಧಿಕಾರಕ್ಕೆ ಏನು ಬೆಲೆ?” ಎಂದು ಭಾವೋದ್ವೇಗಕ್ಕೊಳಗಾಗಿ ಕಣ್ಣೀರು ಸುರಿಸಿದರು.
ಕೇಂದ್ರ ಹಾಗೂ ಸುಪ್ರೀಂ ಕೋರ್ಟ್ ವಿರುದ್ಧ ಅಸಮಾಧಾನ:
ಹಾವೇರಿಯ ಗುತ್ತಲ ತಾಂಡಾ ಮತ್ತು ಕರೂರು ಗ್ರಾಮ ಸೇರಿದಂತೆ ರಾಜ್ಯದ ಸುಮಾರು 22 ಗ್ರಾಮಗಳ ಜನರು ಇದೇ ರೀತಿಯ ಸಂಕಷ್ಟ ಎದುರಿಸುತ್ತಿದ್ದಾರೆ. “ಕಳೆದ ಐದು ವರ್ಷಗಳಿಂದ ನಾನು ಈ ಬಗ್ಗೆ ಕೇಂದ್ರ ಸಚಿವರು, ಸಂಸದರು ಮತ್ತು ಮಾಜಿ ರಾಷ್ಟ್ರಪತಿಗಳಿಗೂ ಮನವಿ ಮಾಡಿದ್ದೇನೆ. ಅಧಿಕಾರಿಗಳು ಮತ್ತು ನ್ಯಾಯಾಲಯಗಳು ಕಚೇರಿಯಲ್ಲಿ ಕುಳಿತು ಆದೇಶ ನೀಡುತ್ತವೆ, ಆದರೆ ಬಡವರ ಸ್ಥಿತಿಯನ್ನು ಯಾರು ನೋಡುತ್ತಾರೆ?” ಎಂದು ಅವರು ಆಕ್ರೋಶ ಹೊರಹಾಕಿದರು.
ಪರಿಹಾರಕ್ಕೆ ಒತ್ತಾಯ:
ಬಡವರಿಗೆ ನ್ಯಾಯ ಒದಗಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಅವರು ಸಂಸದರಿಗೆ ಮನವಿ ಮಾಡಿದರು. ಬಡವರಿಗೆ ತಕ್ಷಣವೇ ಹಕ್ಕುಪತ್ರ ನೀಡಬೇಕು ಮತ್ತು ಅರಣ್ಯ ಇಲಾಖೆಯ ಕಿರುಕುಳವನ್ನು ತಪ್ಪಿಸಬೇಕು. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಮಾನವೀಯ ನೆಲೆಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಡೆಪ್ಯುಟಿ ಸ್ಪೀಕರ್ ಒತ್ತಾಯಿಸಿದ್ದಾರೆ.





