ನವದೆಹಲಿ: ಕಳೆದ ವರ್ಷ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭಾರತೀಯ ಸೇನೆಯು ದೇಶದ ದೃಢಸಂಕಲ್ಪವನ್ನು ಸಾರುವ ಪ್ರಬಲ ಸಂದೇಶ ರವಾನಿಸಿದೆ. “ನ್ಯಾಯ ಸಿಕ್ಕಿದೆ, ಭಾರತ ಒಗ್ಗಟ್ಟಿನಿಂದ ನಿಂತಿದೆ ಮತ್ತು ಈ ಘಟನೆಯನ್ನು ದೇಶ ಎಂದಿಗೂ ಮರೆಯುವುದಿಲ್ಲ” ಎಂದು ಸೇನೆಯು ತಿಳಿಸಿದೆ. ಏಪ್ರಿಲ್ 22, 2025 ರಂದು ನಡೆದ ಈ ದಾಳಿಯಲ್ಲಿ 25 ಪ್ರವಾಸಿಗರು ಬಲಿಯಾಗಿದ್ದು, ಇಡೀ ರಾಷ್ಟ್ರವೇ ಈ ಘಟನೆಯಿಂದ ಬೆಚ್ಚಿಬಿದ್ದಿತ್ತು.
ದಾಳಿಯ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಕಾಶ್ಮೀರದ ಸುಮಾರು 44 ಪ್ರವಾಸಿ ತಾಣಗಳನ್ನು ಮುಚ್ಚಲಾಗಿತ್ತು. ಪ್ರಸ್ತುತ ಹೆಚ್ಚಿನ ಸ್ಥಳಗಳು ಪ್ರವಾಸಿಗರಿಗೆ ಮುಕ್ತವಾಗಿದ್ದರೂ, ದಾಳಿ ನಡೆದ ಬೈಸರನ್ ಮತ್ತು ಚಂದನ್ವಾರಿ ತಾಣಗಳು ಇನ್ನೂ ಮುಚ್ಚಲ್ಪಟ್ಟಿವೆ. ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಾದ್ಯಂತ ಬಿಗಿ ಭದ್ರತೆ ವಹಿಸಲಾಗಿದ್ದು, ಪುಲ್ವಾಮಾ, ಅವಂತಿಪೋರಾ ಮತ್ತು ಶ್ರೀನಗರದಲ್ಲಿ ಹಿರಿಯ ಅಧಿಕಾರಿಗಳು ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿವೆ.





