ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ನ್ಯಾಯದ ಪರವಾಗಿಲ್ಲ ಹಾಗೂ ಮಹಿಳಾ ಮೀಸಲಾತಿ ವಿಚಾರದಲ್ಲಿ ದ್ವಂದ್ವ ನಿಲುವು ಹೊಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಕುರಿತು ಪ್ರಧಾನಿಯವರ ನಡೆಯನ್ನು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯ ಮುಖ್ಯಾಂಶಗಳು:
ಮಹಿಳಾ ಮೀಸಲಾತಿ ಜಾರಿಯಲ್ಲಿ ವಿಳಂಬ: ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದು 12 ವರ್ಷಗಳಾದರೂ ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದಿಲ್ಲ. ಮಹಿಳೆಯರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ 2023ರಲ್ಲೇ ಇದನ್ನು ಜಾರಿಗೊಳಿಸಬಹುದಿತ್ತು ಎಂದು ಕಿಡಿಕಾರಿದರು.
ಕಾಂಗ್ರೆಸ್ ನಿಲುವು ಸ್ಪಷ್ಟ: ಕಾಂಗ್ರೆಸ್ ಪಕ್ಷ ಎಂದಿಗೂ ಮಹಿಳಾ ಮೀಸಲಾತಿಗೆ ವಿರೋಧವಾಗಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ (ಗ್ರಾಮ ಪಂಚಾಯತ್ನಿಂದ ನಗರಸಭೆಯವರೆಗೆ) ಶೇ. 50ರಷ್ಟು ಮೀಸಲಾತಿ ನೀಡಿದ್ದು ಕಾಂಗ್ರೆಸ್. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ತಂದ 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳೇ ಇದಕ್ಕೆ ಅಡಿಪಾಯ ಎಂದು ನೆನಪಿಸಿದರು.
ಕ್ಷೇತ್ರ ಮರುವಿಂಗಡಣೆಗೆ ವಿರೋಧ: ಮೀಸಲಾತಿ ಹೆಸರಿನಲ್ಲಿ ತರಲು ಉದ್ದೇಶಿಸಿರುವ ಕ್ಷೇತ್ರ ಮರುವಿಂಗಡಣೆಯನ್ನು (Delimitation) ನಾವು ವಿರೋಧಿಸುತ್ತೇವೆ. ಇದರಿಂದ ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣ ಭಾರತದ ರಾಜ್ಯಗಳಿಗೆ ಭಾರಿ ಅನ್ಯಾಯವಾಗಲಿದೆ.
ದಕ್ಷಿಣದ ರಾಜ್ಯಗಳಿಗೆ ಹಿನ್ನಡೆ: “ಕ್ಷೇತ್ರ ಮರುವಿಂಗಡಣೆಯಾದರೆ ಉತ್ತರ ಪ್ರದೇಶದ ಸಂಸದರ ಸಂಖ್ಯೆ 120ಕ್ಕೆ ಏರಬಹುದು, ಆದರೆ ಕರ್ನಾಟಕದ್ದು ಕೇವಲ 42ಕ್ಕೆ ಸೀಮಿತವಾಗಬಹುದು. ಇದು ಜನಸಂಖ್ಯೆ ನಿಯಂತ್ರಣ ಮಾಡಿದ ನಮಗೆ ಮಾಡುವ ದ್ರೋಹ” ಎಂದು ಸಿಎಂ ಆತಂಕ ವ್ಯಕ್ತಪಡಿಸಿದರು.
ಪ್ರಧಾನಿಯವರು ಬೆಂಗಳೂರಿಗೆ ಬಂದಿದ್ದಾಗ ಈ ಬಗ್ಗೆ ಅಭಿಪ್ರಾಯ ಕೇಳಿದ್ದರು. ನಾವು ಮೀಸಲಾತಿಗೆ ಬೆಂಬಲವಿದೆ ಎಂದು ಮಾತ್ರ ಹೇಳಿದ್ದೇವೆ ಹೊರತು, ದಕ್ಷಿಣದ ಹಿತಕ್ಕೆ ಧಕ್ಕೆಯಾಗುವ ಕ್ಷೇತ್ರ ಮರುವಿಂಗಡಣೆಯನ್ನಲ್ಲ ಎಂದು ಅವರು ಸ್ಪಷ್ಟಪಡಿಸಿದರು.





