ಬೀದರ್ ಜಿಲ್ಲೆಯ ಸೊಲಪೂರ ಗ್ರಾಮದವರೂ ಹಾಗೂ ಪ್ರಸ್ತುತ ಜೆಡಿಎಸ್ ಜಿಲ್ಲಾಧ್ಯಕ್ಷರೂ ಆಗಿರುವ ರಮೇಶ್ ಪಾಟೀಲ್ ಸೊಲಪೂರ ಅವರು ಕೇಂದ್ರ ಸರ್ಕಾರದ ಉಕ್ಕು ಮಂತ್ರಾಲಯದ ವತಿಯಿಂದ ರಚಿಸಲಾಗಿರುವ ಹಿಂದಿ ಪ್ರಚಾರ ಹಾಗೂ ಪ್ರಸಾರ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಗೌರವಕ್ಕೆ ಪಾತ್ರರಾದ ಅವರನ್ನು ಗ್ರಾಮದ ‘ಪುಣ್ಯಕೋಟಿ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ರಮೇಶ್ ಪಾಟೀಲ್ ಅವರು ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದಂತೆ ಪ್ರಾಮಾಣಿಕ ಮತ್ತು ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರ ಈ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಈ ಮಹತ್ವದ ಜವಾಬ್ದಾರಿಯನ್ನು ನೀಡಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಕಾಂತ ಸ್ವಾಮಿ ಅವರು, “ಒಂದು ಸಣ್ಣ ಹಳ್ಳಿಯಾದ ಸೊಲಪೂರಕ್ಕೆ ರಮೇಶ್ ಪಾಟೀಲ್ ಅವರ ಶ್ರಮದಿಂದಾಗಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡುವಂತಾಗಿದ್ದು ನಮ್ಮ ಗ್ರಾಮಕ್ಕೆ ಹೆಮ್ಮೆಯ ವಿಷಯ. ಈಗ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಇವರಿಗೆ ಹೊಸ ಜವಾಬ್ದಾರಿ ದೊರೆತಿರುವುದು ಸಂತೋಷ ತಂದಿದೆ. ಇವರ ಸಾಧನೆಯು ಗ್ರಾಮದ ಯುವಕರಿಗೆ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಬೆಳೆಯಲು ದೊಡ್ಡ ಪ್ರೇರಣೆಯಾಗಲಿದೆ,” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘಶೆಟ್ಟಿ ಖೆಳಗೆ, ಸಿದ್ದಪ್ಪಾ ಖೆಳಗೆ, ರಾಜಕುಮಾರ್ ಮಡಿವಾಳ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.





