ಕೇವಲ ಎರಡನೇ ದಿನಗಳ ಅಂತರದಲ್ಲಿ ಆರ್ಸಿಬಿ ತನ್ನ 7ನೇ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಏಪ್ರಿಲ್ 18 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಸೋಲು ಕಂಡಿತ್ತು. ಹೀಗಾಗಿ ಸೇಡು ತೀರಿಸಿಕೊಳ್ಳುವ ಇರಾದೆಯೊಂದಿಗೆ ಮೈದಾನಕ್ಕಿಳಿದಿದ್ದ ಆರ್ಸಿಬಿ ಅರ್ಹ ಗೆಲುವು ದಾಖಲಿಸಿತು. ಅಜೇಯ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ ಕೊಹ್ಲಿ, ಜಿತೇಶ್ ಶರ್ಮಾ ಗೆಲುವಿನ ಸಿಕ್ಸರ್ ಬಾರಿಸುತ್ತಿದ್ದಂತೆ ಅಪರೂಪದ ಸಂಭ್ರಮಾಚರಣೆ ಮಾಡುವ ಮೂಲಕ ಪಂಜಾಬ್ ತಂಡವನ್ನು ಅದರಲ್ಲೂ ನಾಯಕ ಶ್ರೇಯಸ್ ಅಯ್ಯರ್ನನ್ನು ಸರಿಯಾಗಿ ಕಿಚಾಯಿಸಿದರು. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ವಾಸ್ತವವಾಗಿ 19ನೇ ಓವರ್ನ ಕೊನೆಯ ಎಸೆತವನ್ನು ಸಿಕ್ಸರ್ಗಟ್ಟುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇತ್ತ ತಂಡ ಗೆಲ್ಲುತ್ತಿದ್ದಂತೆ ಕ್ರೀಸ್ನಲ್ಲಿದ್ದ ಕೊಹ್ಲಿ, ಶ್ರೇಯಸ್ ಅಯ್ಯರ್ ಕಡೆಗೆ ತಿರುಗಿ ತಮಾಷೆಯಾಗಿ ಸಂಭ್ರಮಾಚರಣೆ ಮಾಡಿದರು. ಇದನ್ನು ನೋಡಿದ ಅಯ್ಯರ್ ಕೊಂಚ ಕೋಪಗೊಂಡಂತೆ ಕಂಡುಬಂತು.

ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಹ್ಯಾಂಡ್ಶೇಕ್ ಮಾಡತ್ತಿರುವಾಗ ಅಯ್ಯರ್ ಕೋಪದಲ್ಲಿ ಕೊಹ್ಲಿ ಬಳಿ ಮಾತನಾಡಿದರು. ಆದರೆ ಕೊಹ್ಲಿ ಮಾತ್ರ ನಗುತ್ತಾ, ಆ ಕ್ಷಣವನ್ನು ಹಗುರಗೊಳಿಸಲು ಪ್ರಯತ್ನಿಸಿದರು. ಆದರೆ ಅಯ್ಯರ್ ಮಾತ್ರ ಸಮಾಧಾನಗೊಂಡವರಂತೆ ಕಂಡುಬರಲಿಲ್ಲ.