ರಾಜ್ಯದ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಮನುಕುಲವೇ ತಲೆತಗ್ಗಿಸುವಂತಹ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವಕನನ್ನು ಕಿಡ್ನಾಪ್ ಮಾಡಿ, ಬಲವಂತವಾಗಿ ಮಂಗಳಮುಖಿ ವೇಷ ಹಾಕಿಸಿ, ಸೆಕ್ಸ್ ವರ್ಕ್ ಹಾಗೂ ಹಣ ವಸೂಲಿಗೆ ಬಳಸಿಕೊಂಡಿರುವ ಭೀಕರ ದಂಧೆ ಬಯಲಾಗಿದೆ. ಅಷ್ಟೇ ಅಲ್ಲ, ಆತನ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೂ ಹುನ್ನಾರ ನಡೆಸಲಾಗಿತ್ತು. ಈ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬಂದ ಯುವಕ ಈಗ ತನಗಾದ ಅನ್ಯಾಯಕ್ಕೆ ನ್ಯಾಯ ಕೋರಿ ಪೊಲೀಸರ ಮೆಟ್ಟಿಲೇರಿದ್ದಾನೆ.
ಮೈಸೂರು/ನಂಜನಗೂಡು
ಕಿಡ್ನಾಪ್… ಬಲವಂತದ ಲಿಂಗ ಬದಲಾವಣೆ ಪ್ರಯತ್ನ… ಸೆಕ್ಸ್ ವರ್ಕ್ ಗೆ ಬಳಕೆ! ಇದು ಯಾವುದೋ ಸಿನಿಮಾದ ಕಥೆಯಲ್ಲ, ನಂಜನಗೂಡಿನ ಯುವಕ ಅನಿಲ್ ಕುಮಾರ್ ಅನುಭವಿಸಿದ ನರಕಯಾತನೆ.
ನಂಜನಗೂಡಿನ ತ್ಯಾಗರಾಜ ಕಾಲೋನಿಯ ಅನಿಲ್ ಕುಮಾರ್, ನಾಲ್ಕು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಮಂಗಳೂರಿನ ಅನಿತಾ ಎಂಬ ಮಂಗಳಮುಖಿ ಮತ್ತು ಆಕೆಯ ತಂಡ ಅನಿಲ್ ನನ್ನು ಅಪಹರಿಸಿತ್ತು. ಮುಸುಕು ಹಾಕಿ, ಮದಕ ಪದಾರ್ಥ ನೀಡಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು.
ದಂಧೆಯ ಕರಾಳ ಮುಖ:
ಬಲವಂತದ ವೇಷ: ಅನಿಲ್ ಗೆ ಸೀರೆ, ನೈಟಿ ತೊಡಿಸಿ ‘ಅಕ್ಷತಾ’ ಎಂದು ಹೆಸರಿಟ್ಟು ಮಂಗಳಮುಖಿಯನ್ನಾಗಿ ಮಾಡಲಾಯಿತು.
ಹಣ ವಸೂಲಿ: ಪ್ರತಿದಿನ ಅಂಗಡಿಗಳ ಮುಂದೆ ನಿಂತು 2 ರಿಂದ 3 ಸಾವಿರ ರೂ. ಕಲೆಕ್ಷನ್ ಮಾಡಲು ಒತ್ತಾಯಿಸಲಾಗುತ್ತಿತ್ತು.
ಸೆಕ್ಸ್ ವರ್ಕ್: ಅನಿಲ್ ನನ್ನು ಕೇರಳ ಮತ್ತು ಮಂಗಳೂರಿನ ವಿವಿಧ ಭಾಗಗಳಿಗೆ ಕಳುಹಿಸಿ ಬಲವಂತವಾಗಿ ಸೆಕ್ಸ್ ವರ್ಕ್ ಗೆ ದೂಡಲಾಗಿತ್ತು.
ಸೋಷಿಯಲ್ ಮೀಡಿಯಾ ಬಳಕೆ: ಅನಿಲ್ ಮೂಲಕ ರೀಲ್ಸ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಣ ಗಳಿಸುತ್ತಿದ್ದರು.
ಸರ್ಟಿಫಿಕೇಟ್ ಅಕ್ರಮದ ಅನುಮಾನ:
ಅನಿಲ್ ಕುಮಾರ್ ಗೆ ಯಾವುದೇ ಲೈಂಗಿಕ ದೌರ್ಬಲ್ಯವಿಲ್ಲದಿದ್ದರೂ, ಸಮಾಜ ಕಲ್ಯಾಣ ಇಲಾಖೆಯಿಂದ ‘ಟ್ರಾನ್ಸ್ಜೆಂಡರ್’ ಎಂದು ಅಧಿಕೃತ ಸರ್ಟಿಫಿಕೇಟ್ ಕೊಡಿಸಿರುವುದು ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮುಂದಿನ ತಿಂಗಳು ಬಾಂಬೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಲಿಂಗ ಬದಲಾವಣೆ ಮಾಡಲು ಸ್ಕೆಚ್ ಹಾಕಲಾಗಿತ್ತು.
ಜೈಲು ಬೆದರಿಕೆ ಹಾಗೂ ಕಿರುಕುಳ:
ಈ ದಂಧೆಯಿಂದ ಹೊರಬರಲು ಪ್ರಯತ್ನಿಸಿದ ಅನಿಲ್, ತಾನು ದುಡಿದ 3 ಲಕ್ಷ ಹಣ ಕೇಳಿದಾಗ ಅನಿತಾ ತಂಡ ಆತನ ಮೇಲೆ ಕಳ್ಳತನದ ಸುಳ್ಳು ಆರೋಪ ಹೊರಿಸಿ ಜೈಲಿಗೆ ಹಾಕಿಸುವ ಬೆದರಿಕೆ ಹಾಕಿದೆ. ಪ್ರಾಣ ಉಳಿಸಿಕೊಳ್ಳಲು ಅನಿಲ್ ನಂಜನಗೂಡಿಗೆ ಓಡಿ ಬಂದಿದ್ದರೂ, ಅಲ್ಲಿಯೂ ಮಂಗಳಮುಖಿಯರನ್ನು ಕಳುಹಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಸಂತ್ರಸ್ತ ಆರೋಪಿಸಿದ್ದಾನೆ.
ಪೊಲೀಸ್ ದೂರು ಮತ್ತು ಪ್ರಶ್ನೆಗಳು:
ಪ್ರಸ್ತುತ ಅನಿಲ್ ಕುಮಾರ್ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ನಂಜನಗೂಡು ಪೊಲೀಸರು ಈ ಬಗ್ಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಈ ಪ್ರಕರಣ ಎತ್ತುತ್ತಿರುವ ಗಂಭೀರ ಪ್ರಶ್ನೆಗಳು:
ವೈದ್ಯಕೀಯ ಪರೀಕ್ಷೆ ಇಲ್ಲದೆ ಸಮಾಜ ಕಲ್ಯಾಣ ಇಲಾಖೆ ಸರ್ಟಿಫಿಕೇಟ್ ನೀಡಿದ್ದು ಹೇಗೆ?
ಅಮಾಯಕರನ್ನು ಅಪಹರಿಸಿ ಲಿಂಗ ಬದಲಿಸುವ ಈ ಜಾಲದ ಹಿಂದೆ ಇರುವ ಪ್ರಭಾವಿಗಳು ಯಾರು?
ಶೇ. 90 ರಷ್ಟು ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಯುವಕನಿಗೆ ರಕ್ಷಣೆ ಸಿಗುವುದೇ?





