ಮಡಿಕೇರಿ: ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ಗೆ ತೆರಳಿದ್ದ ಮಹಿಳೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ನಾಪತ್ತೆಯಾಗಿರುವ ಮಹಿಳೆಯನ್ನು ಶರಣ್ಯ (36) ಎಂದು ಗುರುತಿಸಲಾಗಿದೆ. ಅವರು ಯವಕಪಾಡಿ ಗ್ರಾಮದ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದು, ಅಲ್ಲಿಂದ ಟ್ರೆಕ್ಕಿಂಗ್ಗೆ ಒಬ್ಬರೇ ತೆರಳಿದ್ದರು. ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಂಡು ಬಂದಿದ್ದ ಶರಣ್ಯ ಅವರನ್ನು ಕಾಡಾನೆಗಳ ಸಂಚಾರ ಇರುವ ಪ್ರದೇಶವಾದ್ದರಿಂದ ಇತರ ಪ್ರವಾಸಿಗರ ಜೊತೆ ಕಳುಹಿಸಲಾಗಿತ್ತು.
ಆದರೆ, ಬೆಟ್ಟಕ್ಕೆ ತೆರಳಿದ್ದ ಇತರ ಪ್ರವಾಸಿಗರು ಹಿಂದಿರುಗಿದ್ದರೂ ಶರಣ್ಯ ಮಾತ್ರ ಮರಳಿ ಬರದ ಹಿನ್ನೆಲೆ ಆತಂಕ ಉಂಟಾಗಿದೆ. ಈ ವಿಷಯವನ್ನು ಸ್ಥಳೀಯ ನಿವಾಸಿ ಕುಡಿಯರ ಮುತ್ತಪ್ಪ ಅವರು ಪೊಲೀಸರಿಗೆ ತಿಳಿಸಿದ್ದಾರೆ.
ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಗ್ರಾಮಸ್ಥರು ಬೆಟ್ಟದ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದರೂ ಮಹಿಳೆಯ ಸುಳಿವು ಇನ್ನೂ ಸಿಗಲಿಲ್ಲ.
ಇನ್ನೂ ಇಂದು ಕೂಡ ಶೋಧ ಕಾರ್ಯ ಮುಂದುವರಿದಿದ್ದು, ಮಹಿಳೆಯ ಮೊಬೈಲ್ ಕೇರಳ ನೆಟ್ವರ್ಕ್ನಲ್ಲಿ ಸಿಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆ ತಂಡಗಳು ಬೆಟ್ಟದ ಪ್ರದೇಶದಲ್ಲಿ ತಂಗಿದ್ದು ಶೋಧ ಕಾರ್ಯ ತೀವ್ರಗೊಳಿಸಿವೆ.





