ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು ಹಾರಿಸಿ ದಾರುಣವಾಗಿ ಕೊಲೆ ಮಾಡಲಾಗಿದೆ.
ವಿಜಯಪುರ ಜಿಲ್ಲೆಯ ಚಡಚನ ತಾಲೂಕಿನ ಗೋವಿಂದಪುರ ಗ್ರಾಮದ ಬಳಿ ಭೀಮಾ ನದಿ ತಟದಲ್ಲಿ ಈ ರಕ್ತಚರಿತ್ರೆ ನಡೆದಿದೆ.
ಹತ್ಯೆಯಾದ ದುರ್ದೈವಿಗಳ ವಿವರ:
ಜಮೀನು ಮಾಲೀಕರಾದ ನಿರಾಳೆ ಕುಟುಂಬದ ಸದಸ್ಯರು ಹಾಗೂ ಅವರ ಆಪ್ತರು ಈ ಘಟನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ದುಂಡಪ್ಪ ಶಿವಪುತ್ರ, ಚಂದ್ರಕಾಂತ ,ರಾಹುಲ್, ಸಮರ್ಥ್ ,ಶಬ್ಬೀರ್ ಅತ್ತಾರ್ (ಸ್ನೇಹಿತ)
(ಮತ್ತೊಬ್ಬರ ವಿವರ ಲಭ್ಯವಾಗಬೇಕಿದೆ)
ಘಟನೆಯ ಹಿನ್ನೆಲೆ ಏನು?
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಹತ್ಯೆ ನಡೆದ ಜಮೀನನ್ನು ನಿರಾಳೆ ಕುಟುಂಬದವರು ಇತ್ತೀಚೆಗಷ್ಟೇ ಖರೀದಿಸಿದ್ದರು. ಈ ಜಮೀನಿನ ವಿಚಾರವಾಗಿ ಮೊದಲಿನಿಂದಲೂ ವ್ಯಾಜ್ಯವಿತ್ತು ಎನ್ನಲಾಗಿದೆ. ಶನಿವಾರ ಮಧ್ಯಾಹ್ನ ನಿರಾಳೆ ಕುಟುಂಬದವರು ಜಮೀನಿನ ಬಳಿ ಇದ್ದಾಗ, ಹಠಾತ್ ದಾಳಿ ನಡೆದಿದೆ.
ಬೈಕ್ಗಳಲ್ಲಿ ಬಂದ 15ರಿಂದ 20 ಮಂದಿ ಯುವಕರ ರೌಡಿ ಗ್ಯಾಂಗ್, ಏಕಾಏಕಿ ಮಾರಕಾಸ್ತ್ರಗಳಿಂದ ನಿರಾಳೆ ಕುಟುಂಬದವರ ಮೇಲೆ ಮುಗಿಬಿದ್ದಿದೆ. ಅಷ್ಟೇ ಅಲ್ಲದೆ, ಗುಂಡು ಹಾರಿಸುವ ಮೂಲಕ ಸ್ಥಳದಲ್ಲಿದ್ದ ಆರೂ ಜನರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸ್ ಪಡೆ
ವಿಷಯ ತಿಳಿಯುತ್ತಿದ್ದಂತೆ ಚಡಚನ ಠಾಣೆಯ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಕೋಲಾಹಲ ಸೃಷ್ಟಿಸಿರುವ ಈ ಸಾಮೂಹಿಕ ನರಮೇಧದ ಬೆನ್ನಟ್ಟಿರುವ ಪೊಲೀಸರು, ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದಾರೆ. ಹಂತಕರ ಪತ್ತೆಗೆ ಜಾಲ ಬೀಸಲಾಗಿದ್ದು, ತನಿಖೆ ತೀವ್ರಗತಿಯಲ್ಲಿ ಮುಂದುವರಿದಿದೆ.




