
ಪಾಯಲ್ ತಂದೆ ರಿಕ್ಷಾ ಚಾಲಕರಾಗಿದ್ದು, ಗುರುವಾರ ಮಗಳನ್ನು ವಿಮಾನ ಹತ್ತಿಸಿ ಉತ್ಸಾಹದಿಂದ ಕಳುಹಿಸಿದ್ದರು. ಅವಳು ಸುರಕ್ಷಿತವಾಗಿ ಲಂಡನ್ ತಲುಪುತ್ತಾಳೆ. ಅಲ್ಲಿ ಅಧ್ಯಯನ ಮಾಡಿ, ಉನ್ನತ ಸ್ಥಾನಕ್ಕೇರುತ್ತಾಳೆ ಎಂದು ಕುಂಟುಂಬಸ್ಥರು ಸಹ ಕನಸು ಕಂಡಿದ್ದರು. ಆದರೆ ವಿಧಿಯ ಆಟ ಮಾತ್ರ ಬೇರೆಯದೇ ಆಗಿತ್ತು. ಪಾಯಲ್ ಸಾವು ದೃಢಪಟ್ಟಿದ್ದು, ಡಿಎನ್ಎ ಪರೀಕ್ಷೆಯಿಂದ ಮೃತದೇಹ ಗುರುತಿಸಲಾಗಿದೆ.

ಮಗಳ ಕನಸಿನ ಬಗ್ಗೆ ಮಾತಾಡಿರುವ ತಂದೆ ಸುರೇಶ್ ಖಾಟಿಕ್, ಕಾಲೇಜು ಮುಗಿಸಿದ ನಂತರ ಪಾಯಲ್ ನಮ್ಮೊಂದಿಗೆ ಇದ್ದಳು. ಅವಳು ಲಂಡನ್ನಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಬಯಸಿದ್ದಳು. ಅವಳ ಶಿಕ್ಷಣಕ್ಕಾಗಿ ಸಾಲ ಮಾಡಿದ್ದೆವು. ಅವಳಿಗೆ ಉದ್ಯೋಗ ಸಿಗುವ ಭರವಸೆ ಇತ್ತು. ಇದರಿಂದ ನಮ್ಮ ಬಡತನ ನೀಗುತ್ತದೆ ಎಂದು ಭಾವಿಸಿದ್ದೆವು. ಆದರೆ ಈಗ ಸಾಲ ಮರುಪಾವತಿಸಲು ಯಾವುದೇ ದಾರಿ ಇಲ್ಲ ಎಂದು ಕಣ್ಣೀರಿಟ್ಟದ್ದಾರೆ.
ಪಾಯಲ್ ಲಂಡನ್ನಲ್ಲಿ ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ಪಡೆಯಲು ಹೋಗುತ್ತಿದ್ದಳು. ಸ್ಥಳೀಯರು, ಯುವತಿ ಬಾಲ್ಯದಿಂದಲೂ ಶಾಲೆಯ ಟಾಪರ್ ಆಗಿದ್ದಳು ಎಂದು ಹೇಳಿಕೊಂಡಿದ್ದಾರೆ. ಗುರುವಾರ ಅಹಮದಾಬಾದ್ನಲ್ಲಿ ಅಪಘಾತಗೊಂಡ ಏರ್ ಇಂಡಿಯಾ ವಿಮಾನದಲ್ಲಿ 12 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಈ ಅವಘಡದಲ್ಲಿ 241 ಜನ ಸಾವನ್ನಪ್ಪಿದ್ದಾರೆ. ಓರ್ವ ಮಾತ್ರ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾರೆ.





