ಹೈದರಾಬಾದ್: ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ಯುವತಿಗೆ ಎಚ್ಐವಿ ಸೋಂಕಿತ ರಕ್ತವನ್ನು ಇಂಜೆಕ್ಟ್ ಮಾಡಿದ್ದ ವಿಕೃತ ಘಟನೆ ಈಗ ದುರಂತ ಅಂತ್ಯ ಕಂಡಿದೆ. ಆರೋಪಿ ಮನೋಹರ್ ಎಸಗಿದ ಈ ಪೈಶಾಚಿಕ ಕೃತ್ಯದಿಂದ ತೀವ್ರ ಮಾನಸಿಕ ಖಿನ್ನತೆಗೊಳಗಾಗಿದ್ದ 24 ವರ್ಷದ ಯುವತಿ, ಏಪ್ರಿಲ್ 10ರಂದು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆ*ಹತ್ಯೆಗೆ ಶರಣಾಗಿದ್ದಾಳೆ.
ಏನಿದು ಘಟನೆ?:
ಆರೋಪಿ ಮನೋಹರ್ ಮತ್ತು ಸಂತ್ರಸ್ತೆ ಸಂಬಂಧಿಕರಾಗಿದ್ದು, ಇವರಿಬ್ಬರಿಗೆ ಮದುವೆ ಮಾಡಲು ಕುಟುಂಬಸ್ಥರು ಈ ಹಿಂದೆ ನಿರ್ಧರಿಸಿದ್ದರು. ಆದರೆ, ಆರೋಪಿಯ ಪೋಷಕರು ಎಚ್ಐವಿ ಪೀಡಿತರಾಗಿದ್ದ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಯುವತಿಯ ಪೋಷಕರು ಕಳೆದ ಸೆಪ್ಟೆಂಬರ್ನಲ್ಲಿ ಮನೋಹರ್ನನ್ನು ಪರೀಕ್ಷೆಗೆ ಒಳಪಡಿಸಿದ್ದರು. ಪರೀಕ್ಷೆಯಲ್ಲಿ ಅವನಿಗೂ ಎಚ್ಐವಿ ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಯುವತಿಯು ಮದುವೆಯನ್ನು ನಿರಾಕರಿಸಿದ್ದಳು. ಇದರಿಂದ ಕ್ರೋಧಗೊಂಡ ಮನೋಹರ್, ಮಾರ್ಚ್ 11ರಂದು ಯುವತಿಯ ಮನೆಗೆ ಬಲವಂತವಾಗಿ ನುಗ್ಗಿ ತನಗಿದ್ದ ಎಚ್ಐವಿ ಸೋಂಕಿತ ರಕ್ತವನ್ನು ಆಕೆಗೆ ಇಂಜೆಕ್ಟ್ ಮಾಡಿದ್ದ.
ಮಾನಸಿಕ ನೋವಿಗೆ ಬಲಿಯಾದ ಯುವತಿ:
ಘಟನೆಯ ನಂತರ ಪೊಲೀಸರು ಮನೋಹರ್ನನ್ನು ಬಂಧಿಸಿ ಜೈಲಿಗಟ್ಟಿದ್ದರು. ಆದರೆ, ರಕ್ತದ ಮೂಲಕ ಸೋಂಕು ಹರಡಿರುವ ಭೀತಿ ಮತ್ತು ನಡೆದ ಘಟನೆಯಿಂದ ಯುವತಿ ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಳು. ಇದೇ ಖಿನ್ನತೆಯಿಂದಾಗಿ ಆಕೆ ಏಪ್ರಿಲ್ 10ರಂದು ಆತ್ಮಹತ್ಯೆಯ ಹಾದಿ ತುಳಿದಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸುತ್ತಿರುವುದಾಗಿ ಪೋಚಾರಂ ಐಟಿ ಕಾರಿಡಾರ್ ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಗಳ ನಿರ್ಲಕ್ಷ್ಯದ ಇತಿಹಾಸ:
ಈ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗುತ್ತಿರುವ ಬೆನ್ನಲ್ಲೇ, ಕಳೆದ ಡಿಸೆಂಬರ್ನಲ್ಲಿ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದ ಘಟನೆಯೂ ನೆನಪಿಗೆ ಬರುತ್ತಿದೆ. ಅಲ್ಲಿ ಥಲಸೀಮಿಯಾ ಚಿಕಿತ್ಸೆ ಪಡೆಯುತ್ತಿದ್ದ ಐವರು ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಅಶುದ್ಧ ರಕ್ತ ವರ್ಗಾವಣೆ ಮಾಡಿದ ಪರಿಣಾಮವಾಗಿ ಎಚ್ಐವಿ ಸೋಂಕು ತಗುಲಿತ್ತು. ಇಂತಹ ಘಟನೆಗಳು ರಕ್ತ ತಪಾಸಣಾ ಪ್ರೋಟೋಕಾಲ್ಗಳ ವೈಫಲ್ಯ ಮತ್ತು ಸಮಾಜದಲ್ಲಿನ ವಿಕೃತ ಮನಸ್ಥಿತಿಯ ಭಯಾನಕ ಮುಖವನ್ನು ಅನಾವರಣಗೊಳಿಸುತ್ತಿವೆ.





