ಟೆಹ್ರಾನ್ : ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಮುಚ್ಚಲ್ಪಟ್ಟಿದ್ದ ವಿಶ್ವದ ಪ್ರಮುಖ ವ್ಯಾಪಾರ ಮಾರ್ಗ ಹೊರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಇರಾನ್ ನಿರ್ಧರಿಸಿದ್ದು, ಇದು ಭಾರತಕ್ಕೆ ದೊಡ್ಡ ಸಮಾಧಾನ ತಂದಿದೆ. ಭಾರತವು ತನ್ನ ಒಟ್ಟು ತೈಲ ಆಮದಿನ ಸುಮಾರು 50% ರಷ್ಟು ಭಾಗಕ್ಕೆ ಈ ಜಲಮಾರ್ಗವನ್ನೇ ಅವಲಂಬಿಸಿದೆ. ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘಚಿ ಅವರ ಈ ನಿರ್ಧಾರದಿಂದಾಗಿ, ಜಲಸಂಧಿಯ ಪಶ್ಚಿಮ ಭಾಗದಲ್ಲಿ ಸಿಲುಕಿಕೊಂಡಿದ್ದ ಸುಮಾರು 15 ಭಾರತೀಯ ವ್ಯಾಪಾರಿ ಹಡಗುಗಳು ಸುರಕ್ಷಿತವಾಗಿ ದೇಶಕ್ಕೆ ಮರಳಲು ಹಾದಿ ಸುಗಮವಾಗಿದೆ.
ಕಳೆದ ಫೆಬ್ರವರಿ 28ರಿಂದ ಆರಂಭವಾಗಿದ್ದ 50 ದಿನಗಳ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಮತ್ತು ಅಮೆರಿಕಾ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಒಪ್ಪಂದದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಜಾಗತಿಕ ಇಂಧನ ಪೂರೈಕೆ ಮತ್ತು ಸುರಕ್ಷಿತ ವ್ಯಾಪಾರದ ದೃಷ್ಟಿಯಿಂದ ಈ ಮಾರ್ಗವನ್ನು ತೆರೆಯುವ ಅಗತ್ಯವನ್ನು ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಿಹೇಳಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯೂ ಇಳಿಕೆಯಾಗಿದ್ದು, ಬ್ಯಾರೆಲ್ಗೆ 119 ಡಾಲರ್ ತಲುಪಿದ್ದ ಬ್ರೆಂಟ್ ಕಚ್ಚಾ ತೈಲದ ಬೆಲೆ ಈಗ 90 ಡಾಲರ್ಗಿಂತ ಕೆಳಕ್ಕೆ ಕುಸಿದಿದೆ. ಇದು ಭಾರತದ ಆರ್ಥಿಕತೆಗೆ ಅತ್ಯಂತ ಸ್ವಾಗತಾರ್ಹ ಸಂಗತಿಯಾಗಿದೆ.





