ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್ನ ಹೊಳೆಮುರಿದಟ್ಟಿ ಅರಣ್ಯ (ತೋಮಿಯರ್ಪಾಳ್ಯ ಗ್ರಾಮದ ಬಳಿ) ಪ್ರದೇಶದಲ್ಲಿ ನಡೆದ ಮೂವರ ಶೂ*ಟೌಟ್ ಪ್ರಕರಣ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಾವನ್ನಪ್ಪಿದ ಮೂವರೂ ಹವ್ಯಾಸಿ ಬೇಟೆಗಾರರಾಗಿದ್ದು, ಸ್ವಾತಂತ್ರ್ಯ ದಿನಾಚರಣೆ ರಜೆಯ ಸಂದರ್ಭದಲ್ಲಿ ಜಿಂಕೆ ಬೇಟೆಗೆ ಕಾಡಿಗೆ ಪ್ರವೇಶಿಸಿದ್ದರು ಮತ್ತು ಸ್ಥಳದಲ್ಲಿ ಜಿಂಕೆ ಮಾಂಸವಿದ್ದ ನಾಲ್ಕು ಚೀಲಗಳು ಪತ್ತೆಯಾಗಿವೆ ಎಂದು ಅರಣ್ಯ ಇಲಾಖೆ ಹೇಳಿದೆ. ಆದರೆ, ಈ ಆರೋಪವನ್ನು ತೀವ್ರವಾಗಿ ನಿರಾಕರಿಸಿರುವ ಮೃತರ ಕುಟುಂಬಸ್ಥರು, ಸತ್ತವರು ಬೇಟೆಗಾರರಲ್ಲ, ರೈತರು ಎಂದು ಸ್ಪಷ್ಟಪಡಿಸಿದ್ದಾರೆ.
ಮೃ*ತರಲ್ಲೊಬ್ಬರಾದ ಆಂಥೋನಿಯ ಪತ್ನಿ ಲೌರ್ಡೆ ಮೇರಿ ಮಾತನಾಡಿ, ತಮ್ಮ ಪತಿ ಬೆಳೆದಿದ್ದ ಮೆಕ್ಕೆಜೋಳದ ಬೆಳೆಯನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಕೃಷಿ ಭೂಮಿಯಲ್ಲಿ ಮಲಗಿದ್ದಾಗ ಅರಣ್ಯ ಸಿಬ್ಬಂದಿ ಅವರನ್ನು ಬಲವಂತವಾಗಿ ಕರೆದೊಯ್ದು ಗುಂಡಿಕ್ಕಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೊಬ್ಬ ಮೃತ ಕುಮಾರ್ ಅವರ ಪತ್ನಿ ಡೊಮಿನಾ ಹಾಗೂ ಮೈಸೂರಿನ ಸಂಬಂಧಿ ಅಜಯ್ ಆಂಟನಿ, “ಅವರು ಯಾವುದೇ ತಪ್ಪು ಮಾಡಿದ್ದರೂ ಕೊಲ್ಲಲು ಅಧಿಕಾರ ಕೊಟ್ಟವರು ಯಾರು? ಅರಣ್ಯ ಸಿಬ್ಬಂದಿ ಮೇಲೆ ಅವರು ಗುಂಡು ಹಾರಿಸಿದ್ದಕ್ಕೆ ಸಾಕ್ಷಿ ಎಲ್ಲಿದೆ? ಕೊಲ್ಲುವ ಬದಲು ಉದ್ದೇಶಪೂರ್ವಕವಾಗಿ ಅವರ ಕುತ್ತಿಗೆ, ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಗುರಿವಿಟ್ಟು ಎನ್*ಕೌಂಟರ್ ಮಾಡಲಾಗಿದೆ,” ಎಂದು ಕಣ್ಣೀರಿಡುತ್ತಾ ಪ್ರಶ್ನಿಸಿದ್ದಾರೆ.
ಇದೇ ವೇಳೆ, ಸ್ಥಳದಿಂದ ತಪ್ಪಿಸಿಕೊಂಡು ಬಂದ ಮಹಿಮಾ ದಾಸ್ ಎಂಬ ವ್ಯಕ್ತಿಯ ಹೇಳಿಕೆಯು ಅರಣ್ಯ ಇಲಾಖೆಯ ವಾದಕ್ಕೆ ತದ್ವಿರುದ್ಧವಾಗಿದೆ. ತಾವು ಕೇವಲ ಕಾಣೆಯಾದ ದನಗಳನ್ನು ಹುಡುಕಿಕೊಂಡು ಕಾಡಿಗೆ ಹೋಗಿದ್ದಾಗಿ ಅವರು ತಿಳಿಸಿದ್ದಾರೆ. ಸದ್ಯ ಮೂವರ ಮೃ*ತದೇಹಗಳನ್ನು ಕೊಳ್ಳೇಗಾಲ ಜನರಲ್ ಆಸ್ಪತ್ರೆಯಿಂದ ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಮತ್ತೊಂದೆಡೆ, ಕರ್ನಾಟಕ ಗೃಹ ಸಚಿವರು ಇದನ್ನು ಎನ್ಕೌಂಟರ್ ಎಂದು ನಿರಾಕರಿಸಿದ್ದು, ಇದೊಂದು ‘ಬೇಟೆ ವಿರೋಧಿ ಕಾರ್ಯಾಚರಣೆ’ಯ ವೇಳೆ ನಡೆದ ಗುಂಡಿನ ಚಕಮಕಿ ಎಂದು ಸಮರ್ಥಿಸಿಕೊಂಡಿದ್ದಾರೆ. ಕಾಡಿನಲ್ಲಿದ್ದ ಕಾರಣಗಳ ಬಗ್ಗೆ ಇಲಾಖೆ ಮತ್ತು ಸಂತ್ರಸ್ತರ ನಡುವೆ ವ್ಯತಿರಿಕ್ತ ಹೇಳಿಕೆಗಳಿದ್ದು, ಘಟನೆಯ ಸುತ್ತ ಸಾರ್ವಜನಿಕರಲ್ಲಿ ಅನುಮಾನಗಳು ದಟ್ಟವಾಗಿವೆ.




