ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಭಾನುವಾರ ಕಾಡಾನೆಯ ಫೋಟೊ ತೆಗೆಯಲು ಹೋದ ವ್ಯಕ್ತಿಯೊಬ್ಬರ ಮೇಲೆ ಆನೆ ದಾಳಿ ನಡೆದಿದೆ.
ಮಧುಮಲೈ ಅರಣ್ಯದ ಕಡೆಯಿಂದ ಬಂಡೀಪುರದ ಕಡೆಗೆ ಬರುವ ಸಂದರ್ಭದಲ್ಲಿ ಕೆಕ್ಕನಹಳ್ಳ ಅರಣ್ಯ ಪ್ರದೇಶದ ಬಳಿ ಮರಿಯೊಂದಿಗೆ ಇದ್ದ ಆನೆಯ ಫೋಟೋ ತೆಗೆಯಲು ಹೋದಾಗ ದಾಳಿ ನಡೆದಿದೆ. ದಾಳಿಯಿಂದ ಪ್ರಜ್ಞೆತಪ್ಪಿ ರಸ್ತೆಯಲ್ಲಿಯೇ ಬಿದ್ದಿದ್ದ ವ್ಯಕ್ತಿಯನ್ನು ಸಂಬಂಧಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆನೆಯ ದಾಳಿ ಸುದ್ದಿ ತಿಳಿಯುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು.
ದಾಳಿಗೊಳಗಾದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಬಂಡೀಪುರ ಹುಲಿಯೋಜನೆ ನಿರ್ದೇಶಕ ಪ್ರಭಾಕರನ್ ತಿಳಿಸಿದರು. ಆನೆಗಳು ಮರಿಗಳೊಂದಿಗೆ ಇರುವಾಗ ಮನುಷ್ಯರನ್ನು ಕಂಡರೆ ದಾಳಿ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಮರಿಯ ರಕ್ಷಣೆ ಮಾಡಲು ಸಿಟ್ಟಿಗೇಳುವುದು ಸಹಜ. ಇಂತಹ ಸಂದರ್ಭದಲ್ಲಿ ಪ್ರವಾಸಿಗರು ಫೋಟೋ ತೆಗೆಯಲು ಮುಂದಾಗಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವ್ಯಕ್ತಿ ಮೇಲೆ ಕಾಡಾನೆ ದಾಳಿ ನಡೆಸಿರುವ ದೃಶ್ಯ.
ಘಟನೆ ವಿವರ :
ಬಂಡೀಪುರ- ಕೆಕ್ಕನಹಳ್ಳ ಚೆಕ್ಪೋಸ್ಟ್ ನಡುವಿನ ಕಾಡಿನ ರಸ್ತೆ ಬದಿಯಲ್ಲಿ ಕಾಡಾನೆ ನಿಂತುಕೊಂಡಿರುತ್ತದೆ. ಈ ವೇಳೆ ಬೈಕ್, ಕಾರಿನಿಂದ ಇಳಿದ ಪ್ರವಾಸಿಗರು ಹುಚ್ಚಾಟ ಮಾಡುತ್ತಿರುತ್ತಾರೆ. ಆಗ ಕೇರಳದ ಓರ್ವ ಪ್ರವಾಸಿಗ ಆನೆ ಸಮೀಪಕ್ಕೆ ಹೋಗಿ ಫೋಟೋ ತೆಗೆಯಲು ಮುಂದಾಗಿದ್ದಾನೆ. ಜನ ಕಿರುಚಾಡಿದ್ದರಿಂದ ಆನೆ ಉದ್ವೇಗಗೊಂಡು ಫೋಟೋ ತೆಗೆಯುತ್ತಿದ್ದವನ ಮೇಲೆ ಅಟ್ಯಾಕ್ ಮಾಡಿದೆ.
ಆನೆ, ಪ್ರವಾಸಿಗನ ಬೆನ್ನು ಹತ್ತಿ ಗುಮ್ಮಲು ಹೋಗಿದೆ. ಆಗ ಓಡುತ್ತಿದ್ದ ಪ್ರವಾಸಿಗ ರಸ್ತೆ ಮೇಲೆ ಎಡವಿ ಬಿದ್ದಿದ್ದಾನೆ. ಅವನನ್ನು ಕಾಲಿನಿಂದ ಒದ್ದು ಆನೆ ಅರಣ್ಯದೊಳಕ್ಕೆ ಹೋಗಿದೆ. ಗಾಯಗೊಂಡ ಪ್ರವಾಸಿಗನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅದೃಷ್ಟವಶಾತ್ ಬದುಕುಳಿದಿದ್ದಾನೆ. ಕಾಡು ಪ್ರಾಣಿಗಳ ಜೊತೆ ಹುಷಾರ್ ಆಗಿರಿ. ಮನುಷ್ಯರಂತೆ ವರ್ತಿಸಿ ಎಂದರೆ ಜನರೇ ಪ್ರಾಣಿಗಳಂತೆ ವರ್ತಿಸಿ ಇಂತಹ ಅನಾಹುತಕ್ಕೆ ಒಳಗಾಗುತ್ತಿದ್ದಾರೆ





