ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರಿನ ಹಳೆ ಬಂದರು ಬಳಿಯ ಮೀನುಗಾರಿಕಾ ಧಕ್ಕೆಗೆ ದಿಢೀರ್ ಭೇಟಿ ನೀಡಿದ ವೇಳೆ ಹೈಡ್ರಾಮಾವೇ ನಡೆದಿದೆ. ಡಿಕೆಶಿ ಅವರ ಭೇಟಿಯ ನೆಪದಲ್ಲಿ ಅಧಿಕಾರಿಗಳು ಮೀನುಗಾರಿಕೆ ಹಾಗೂ ವ್ಯಾಪಾರ ವಹಿವಾಟನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರು. ತಮ್ಮ ಆಗಮನದಿಂದ ಸಾರ್ವಜನಿಕರ ದೈನಂದಿನ ಬದುಕಿಗೆ ತೊಂದರೆಯಾಗಿರುವುದನ್ನು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಡಿಕೆಶಿ, ಸ್ಥಳದಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಬಂದ್ ಮಾಡಲು ಆದೇಶಿಸಿದ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ತಮ್ಮ ಭದ್ರತೆಯ ಹೆಸರಿನಲ್ಲಿ ಧಕ್ಕೆಯ ವಹಿವಾಟು ಬಂದ್ ಆಗಿರುವುದನ್ನು ಗಮನಿಸಿದ ಉಪಮುಖ್ಯಮಂತ್ರಿಗಳು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಅವರನ್ನು ಸ್ಥಳಕ್ಕೆ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡರು. “ನಾನು ಇಲ್ಲಿಗೆ ಬಂದಿದ್ದೇ ಮೀನುಗಾರರ ದೈನಂದಿನ ವ್ಯಾಪಾರ-ವಹಿವಾಟು ಹಾಗೂ ಅವರ ಶ್ರಮವನ್ನು ಕಣ್ಣಾರೆ ನೋಡಲು. ಜನರ ಹೊಟ್ಟೆಪಾಡಿಗೆ ತೊಂದರೆ ಕೊಟ್ಟು ಈ ರೀತಿ ಬಂದ್ ಮಾಡಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು? ನಾನು ಯಾರ ಬಳಿಯೂ ವ್ಯಾಪಾರ ಬಂದ್ ಮಾಡಲು ಹೇಳಿಲ್ಲ,” ಎಂದು ಗರಂ ಆದರು. ಮುಂದುವರಿದು, “ಇವರ ಸೆಕ್ಯೂರಿಟಿ ಯಾರಿಗೆ ಬೇಕು? ಸಾರ್ವಜನಿಕರಿಗೆ ತೊಂದರೆ ಕೊಡುವ ಭದ್ರತೆಯ ನೆಪವೊಡ್ಡಿ ಈ ರೀತಿ ಆದೇಶಿಸಿದ ಅಧಿಕಾರಿಯನ್ನು ಇಂದೇ ಅಮಾನತು ಮಾಡಿ” ಎಂದು ಸ್ಥಳದಲ್ಲೇ ಕಡಾಖಂಡಿತವಾಗಿ ಆದೇಶಿಸಿದರು. ತಕ್ಷಣವೇ ಬಂದರಿನಲ್ಲಿ ವ್ಯಾಪಾರ ಚಟುವಟಿಕೆಗಳನ್ನು ಪುನರಾರಂಭಿಸಲು ಸೂಚಿಸಿ, ಸ್ವತಃ ಮೀನುಗಾರರ ಬಳಿ ತೆರಳಿ ಅವರ ಕುಂದುಕೊರತೆಗಳನ್ನು ಆಲಿಸಿದರು.
ಈ ಘಟನೆಯ ಬೆನ್ನಲ್ಲೇ ಮಂಗಳೂರಿನ ಪ್ರಸಿದ್ಧ ತಾಜ್ ಮಹಲ್ ಹೊಟೇಲ್ಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರು ಸ್ಥಳೀಯ ನಾಯಕರೊಂದಿಗೆ ಉಪಹಾರ ಸೇವಿಸಿದರು. ಸ್ಪೀಕರ್ ಯು.ಟಿ. ಖಾದರ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹಾಗೂ ಜಿಲ್ಲಾಧ್ಯಕ್ಷ ಪದ್ಮರಾಜ್ ಅವರೊಂದಿಗೆ ಮಂಗಳೂರಿನ ಕರಾವಳಿ ಖಾದ್ಯಗಳಾದ ತುಪ್ಪದ ದೋಸೆ, ಮಂಗಳೂರು ಬನ್ಸ್, ಇಡ್ಲಿ, ವಡೆ ಹಾಗೂ ಕಾಶಿ ಹಲ್ವಾ ಸವಿದರು. ಉಪಹಾರದ ವೇಳೆ ಚಹಾ ಕುಡಿಯುತ್ತಲೇ ಬಂದರು ಭೇಟಿಯ ಸಂದರ್ಭದಲ್ಲಾದ ಘಟನಾವಳಿಗಳ ಬಗ್ಗೆ ಚರ್ಚಿಸಿದ ಅವರು, ಬಳಿಕ ತಾವೇ ಸ್ವತಃ ಹೊಟೇಲ್ ಬಿಲ್ ಪಾವತಿಸಿ ಅಲ್ಲಿಂದ ನಿರ್ಮಿಸಿದರು.





